ನಾಗೇಶ್ವರ-ಚೆನ್ನಕೇಶವ ದೇವಸ್ಥಾನ ಮೊಸಳೆ

ಅವಳಿ ದೇವಾಲಯಗಳಾದ ನಾಗೇಶ್ವರ–ಚೆನ್ನಕೇಶ್ವರ ದೇವಾಲಯಗಳು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹಾಸನ ತಾಲೂಕಿನ ಮೊಸಳೆ ಎಂಬ ಗ್ರಾಮದಲ್ಲಿ ಇರುವ ಹೊಯ್ಸಳ ಕಾಲದ ಮಹತ್ವದ ದೇವಾಲಯಗಳು. 11ನೇ ಶತಮಾನದ ಹೊಯ್ಸಳ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿರುವ ಈ ಅವಳಿ ದೇವಾಲಯಗಳು ತಮ್ಮ ಶೈಲಿ, ಕೆತ್ತನೆ ಮತ್ತು ಪ್ರಾಚೀನ ಪರಂಪರೆಗಾಗಿ ವಿಶೇಷ ಪ್ರಸಿದ್ಧಿ ಪಡೆದಿವೆ. ಹಲವು ಪುರಾತತ್ವ ಹಾಗೂ ವೈಶಿಷ್ಟ್ಯತೆಗಳಿಂದ ಕೂಡಿರುವ ಮೊಸಳೆ ಗ್ರಾಮವು ಐತಿಹಾಸಿಕ ಮಹತ್ವ ಹೊಂದಿದ ತಾಣವಾಗಿದೆ.

ಈ ದೇವಾಲಯವು ಬೆಂಗಳೂರಿನಿಂದ ಸುಮಾರು 186 ಕಿ.ಮೀ, ಹಾಸನ ನಗರದಿಂದ ಸುಮಾರು 13 ಕಿ.ಮೀ ಹಾಗೂ ಹಾಸನ ರೈಲ್ವೆ ನಿಲ್ದಾಣದಿಂದ ಸುಮಾರು 14 ಕಿ.ಮೀ ದೂರದಲ್ಲಿದೆ.

ಈ ದೇವಾಲಯವು ಬೆಳಿಗ್ಗೆ 7:00 ರಿಂದ ಮಧ್ಯಾಹ್ನ 12:00 ರವರೆಗೆ ಹಾಗೂ ಮಧ್ಯಾಹ್ನ 4:30 ರಿಂದ ರಾತ್ರಿ 8:30 ರವರೆಗೆ ತೆರೆದಿರುತ್ತದೆ.

ಈ ದೇವಾಲಯವನ್ನು ಕ್ರಿ.ಶ. 1200ರ ಅವಧಿಯಲ್ಲಿ ಹೊಯ್ಸಳರ ಆಳ್ವಿಕೆಯಲ್ಲಿ, ಹೊಯ್ಸಳ ರಾಜ ಎರಡನೇ ವೀರ ಬಲ್ಲಾಳ ಅತ್ಯದ್ಭುತವಾಗಿ ನಿರ್ಮಿಸಿದನೆಂದು ಇತಿಹಾಸ ಸೂಚಿಸುತ್ತದೆ.

ಚೆನ್ನಕೇಶವ ದೇವಾಲಯವು ಗರುಡ, ಕೇಶವ, ಜನಾರ್ಧನ, ವೇಣುಗೋಪಾಲ, ಮಾಧವ ಮತ್ತು ಭೂದೇವಿಯ ಪ್ರತಿಮೆಗಳನ್ನು ಹೊಂದಿದೆ. ಇಲ್ಲಿ ವಿಷ್ಣುವಿಗೆ ಸಂಬಂಧಿಸಿದ ಅದ್ಭುತ ವಿಗ್ರಹಗಳನ್ನು ಕಾಣಬಹುದು. ದೇವಾಲಯದ ಗೋಡೆಯ ತಳಭಾಗದಲ್ಲಿ ಕಲ್ಲುಗಳನ್ನು ಸಾಲಾಗಿ ಜೋಡಿಸಿ ಮಾಡಿರುವ ಅಲಂಕಾರ ವಿಶೇಷ ಆಕರ್ಷಣೆ ಆಗಿದೆ.

ನಾಗೇಶ್ವರ ದೇವಾಲಯದಲ್ಲಿ ಚಾಮುಂಡೇಶ್ವರಿ, ಸಪ್ತಮಾತ್ರಿಕೆ, ಶಿವ, ದುರ್ಗಾ ದೇವಿಯ ಏಳು ವಿಗ್ರಹಗಳು, ಗಣಪತಿ, ಶಾರದಾ ಮತ್ತು ಇತರ ದೇವತೆಗಳ ವಿಗ್ರಹಗಳ ನಡುವೆ ನಾಗೇಶ್ವರ ವಿಗ್ರಹವು ಮುಖ್ಯ ಆಕರ್ಷಣೆ ಯಾಗಿದೆ. ದೇವಾಲಯಗಳ ಮೇಲೆ ಕಲಶ ಮತ್ತು ಹೊಯ್ಸಳರ ಚಿಹ್ನೆ ಕೆತ್ತಲ್ಪಟ್ಟಿದ್ದು, ಒಳಗೂ ಹೊರಗೂ ಗೋಡೆಗಳನ್ನು ಸುಂದರವಾದ ಸಂಕೀರ್ಣ ಶಿಲ್ಪಗಳಿಂದ ಅಲಂಕರಿಸಲಾಗಿದೆ.

ಹೊಯ್ಸಳ ವಾಸ್ತುಶಿಲ್ಪದ ಮಾದರಿಯಲ್ಲಿ ನಿರ್ಮಿಸಲಾದ ನಾಗೇಶ್ವರ ಮತ್ತು ಚೆನ್ನಕೇಶವ ದೇವರಿಗೆ ಮೀಸಲಾಗಿರುವ ಅವಳಿ ದೇವಾಲಯಗಳು ಪಕ್ಕಪಕ್ಕದಲ್ಲೇ, ಕೆಲ ಅಡಿ ಅಂತರದಲ್ಲಿ ನಿರ್ಮಿಸಲ್ಪಟ್ಟಿವೆ.

ಹೊಯ್ಸಳ ವಾಸ್ತುಶಿಲ್ಪದ ಎಲ್ಲಾ ವೈಶಿಷ್ಟ್ಯಗಳಂತೆ, ಇಲ್ಲಿ ಸರಳ ಏಕೈಕ ಗೋಪುರಗಳ ರಚನೆ ಗಮನಸೆಳೆಯುತ್ತದೆ. ಪ್ರವೇಶದ ಭಾಗದಲ್ಲಿ ಚೌಕಾಕಾರದ ಮುಖಮಂಟಪವಿದ್ದು, ದೊಡ್ಡ ಗಾತ್ರದ ಗೋಪುರದ ‘ಶಿಖರ’ವು ದೇವಾಲಯಕ್ಕೆ ವಿಶೇಷ ಮನೋಹರತೆ ನೀಡುತ್ತದೆ. ಗರ್ಭಗುಡಿಯು ಮುಂದೆ ರಂಗಮಂಟಪಕ್ಕೆ ಸೇರಿಕೊಂಡಿದ್ದು, ದೇವಾಲಯದ ಮೇಲ್ಭಾಗವು ಗೋಳಾಕಾರದ ರೂಪವನ್ನು ಹೊಂದಿದೆ. ಗುಮ್ಮಟದ ಕೆತ್ತನೆಯ ವೈಶಿಷ್ಟ್ಯಗಳು ಅತ್ಯಂತ ಸುಂದರವಾಗಿದ್ದು, ಈ ಗೋಳಾಕಾರದ ಗುಮ್ಮಟವೇ ದೇವಾಲಯ ಶಿಲ್ಪಕಲೆಯ ಪ್ರಮುಖ ಆಕರ್ಷಣೆ ಎಂದು ಹೇಳಬಹುದು. ಗೋಪುರದ ತುದಿಯಲ್ಲಿರುವ ಕಲಶವು ಅಲಂಕಾರಿಕ ನೀರಿನ ಮಡಕೆಯಂತೆ ಕಾಣುತ್ತದೆ.

ದೇವಾಲಯದ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಇದು ಏಕಕೂಟ ದೇವಾಲಯಗಳ ಗುಂಪಿಗೆ ಸೇರುವ ದೇವಾಲಯವಾಗಿದೆ. ದೇವಾಲಯದ ಹೊರಗೋಡೆಗಳ ಮೇಲಿನ ಅಲಂಕಾರಿಕ ವೈಶಿಷ್ಟ್ಯಗಳು ಪ್ರಾಚೀನ ಶೈಲಿಯಲ್ಲಿ ಕೆತ್ತಲ್ಪಟ್ಟಿದ್ದು, ಈ ಅಲಂಕಾರಗಳು ಗೋಪುರದ ಕೆಳಭಾಗದಿಂದ ಪ್ರಾರಂಭವಾಗಿ ದೇವಾಲಯದ ಸುತ್ತಲೂ ಸಂದರ್ಶಕರ ಮನಸೆಳೆಯುತ್ತವೆ. ಸೂರಿನ ಕೆಳಭಾಗದಲ್ಲಿರುವ ಗೋಡೆಗಂಬಗಳ ಮೇಲೂ ಸೊಗಸಾದ ಕೆತ್ತನೆಗಳಿವೆ. ಪ್ರಾಚೀನ ದೇವಾಲಯಗಳಂತೆ, ಗೋಪುರದ ಕೆಳಗೆ ದೇವತೆಗಳ ದೊಡ್ಡ ಮೂರ್ತಿಗಳು ಮತ್ತು ಚಿತ್ರಗಳನ್ನು ಅಲಂಕಾರಿಕವಾಗಿ ಇರಿಸಲಾಗಿದೆ. ಅವುಗಳಲ್ಲಿ ಶ್ರೀದೇವಿ, ಗೌರಿ, ಮಹೇಶ್ವರಿ, ಭೂದೇವಿ, ಬ್ರಹ್ಮ, ಲಕ್ಷ್ಮೀನಾರಾಯಣ ಮತ್ತು ಶಿವನ ಮೂರ್ತಿಗಳು ಪ್ರಮುಖವಾಗಿದೆ.

ಚೆನ್ನಕೇಶವ ದೇವಾಲಯದ ಗರ್ಭಗುಡಿಯಲ್ಲಿ ಸುಮಾರು ಆರು ಅಡಿ ಎತ್ತರದ, ಅತ್ಯಂತ ಸುಂದರವಾಗಿ ಕೆತ್ತಲ್ಪಟ್ಟ ಚೆನ್ನಕೇಶವ ಮೂರ್ತಿಯಿದೆ. ಮೂರ್ತಿಯ ಎರಡೂ ಬದಿಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯ ವಿಗ್ರಹಗಳು ಆಕರ್ಷಕವಾಗಿ ನಿಂತಿವೆ. ಗರ್ಭದ್ವಾರದಲ್ಲಿ ಗಜಲಕ್ಷ್ಮಿಯ ಸುಂದರ ಮೂರ್ತಿಯಿದೆ. ಕಮಲದ ಆಕಾರದ ರಂಗಮಂಟಪದಲ್ಲಿ ಇಂದ್ರ, ಅಗ್ನಿ, ವರುಣ ಮತ್ತು ವಾಯುವನ್ನು ಕಲಾತ್ಮಕವಾಗಿ ಕೆತ್ತಲಾಗಿದೆ.

ಸುಣ್ಣದ ಕಲ್ಲಿನಿಂದ ನಿರ್ಮಿಸಲಾದ ಈ ಪವಿತ್ರ ದೇವಾಲಯದಲ್ಲಿ ಸುಕಾನಸಿ, ನವರಂಗ ಮತ್ತು ಎರಡೂ ಬದಿಯಲ್ಲಿ ಜಗತಿ ಮುಖಮಂಟಪವನ್ನು ಹೊಂದಿದೆ. ಚೆನ್ನಕೇಶವ ಮೂರ್ತಿಯ ಹಿಂದಿನ ಪ್ರಭಾವಳಿಯಲ್ಲಿ ವಿಷ್ಣುವಿನ ಅವತಾರಗಳಾದ ಮತ್ಸ್ಯ, ಕೂರ್ಮ ಮತ್ತು ವರಾಹ ಅವತಾರಗಳ ಪ್ರತಿನಿಧಿಗಳು ಕಾಣಿಸುತ್ತವೆ. ಗೋಡೆಯ ಮೇಲಿರುವ ಅಲಂಕಾರಗಳಲ್ಲಿ ಅಷ್ಟದಿಕ್ಪಾಲಕರು ತಮ್ಮ ತಮ್ಮ ವಾಹನಗಳ ಮೇಲೆ ಕುಳಿತಿರುವ ಚಿತ್ರಗಳು ಮುದ್ರಣಗೊಂಡಿವೆ.

ಇತಿಹಾಸ

ಹಳೆಯ ಕಥೆಗಳ ಪ್ರಕಾರ, ಪ್ರಾಚೀನ ಕಾಲದಲ್ಲಿ ಜಮದಗ್ನಿ ಮಹರ್ಷಿಗಳು ಈ ಸ್ಥಳದಲ್ಲಿ ಕುಟೀರ ನಿರ್ಮಿಸಿ ವಾಸಿಸುತ್ತಿದ್ದರೆಂದು ಹೇಳಲಾಗಿದೆ. ಈ ಗ್ರಾಮದ ಹೆಸರು ಹಿಂದಿನ ಕಾಲದಲ್ಲಿ “ಮುಸಲ”, ಅಂದರೆ ಕುಟ್ಟಾಣಿ ಎಂದು ಕರೆಯಲ್ಪಡುತ್ತಿತ್ತೆಂದು ಸ್ಥಳೀಯರಿಗೆ ನಂಬಿಕೆ. ಹಾಸನ ತಾಲ್ಲೂಕಿನ ಮೊಸಳೆ ಗ್ರಾಮ ಅಥವಾ ಮೊಸಳೆ ಹೊಸಹಳ್ಳಿ, ನೈಸರ್ಗಿಕ ಸೌಂದರ್ಯ ಹಾಗೂ ಪುರಾತನ ದೇವಾಲಯಗಳೊಂದಿಗೆ ಜನರನ್ನು ಆಕರ್ಷಿಸುವ ಒಂದು ಸಣ್ಣ ಗ್ರಾಮವಾಗಿದೆ. ಇಲ್ಲಿ ಇರುವ ಎರಡು ದೇವಾಲಯಗಳು ಹೊಯ್ಸಳ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಅದರ ವೈಶಿಷ್ಟ್ಯಪೂರ್ಣ ಶಿಲ್ಪಕಲೆಯಿಂದ ಹೆಸರುವಾಸಿಯಾಗಿವೆ.

ಭೇಟಿ ನೀಡಿ
ಹಾಸನ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section